ರಾಜ್ಯದ ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಜಾರಿಗೆ ತಂದ ಶಕ್ತಿ ಯೋಜನೆಯಡಿ, ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿದ್ದು, ಈ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 11.81 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ.
ಶಕ್ತಿ ಯೋಜನೆಯ ಜಾರಿಯಾದ ನಂತರ ಜಿಲ್ಲೆಯಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಉಚಿತ ಪ್ರಯಾಣದ ಒಟ್ಟು ರೂ. 343.86 ಕೋಟಿ ಮೊತ್ತದ ಉಚಿತ ಟಿಕೆಟ್ಗಳನ್ನು ವಿತರಣೆ ಮಾಡಲಾಗಿದ್ದು, ಈ ಮೊತ್ತವು ರಸ್ತೆ ಸಾರಿಗೆ ಸಂಸ್ಥೆಗೆ ಪ್ರಮುಖ ಆದಾಯವಾಗಿದೆ.
ಜಿಲ್ಲೆಯಲ್ಲಿ ಉತ್ತರ ಕನ್ನಡ ಮತ್ತು ಹಳಿಯಾಳ-ದಾಂಡೇಲಿ ವಿಭಾಗಗಳಿದ್ದು, ಶಕ್ತಿ ಯೋಜನೆಯಡಿ ಇದುವರೆಗೆ ಉತ್ತರ ಕನ್ನಡ ವಿಭಾಗದಲ್ಲಿ 9.40 ಕೋಟಿ ಶಕ್ತಿ ಯೋಜನೆಯ ಫಲಾನುಭವಿಗಳ ಸಂಚಾರ ನಡೆದಿದ್ದು ರೂ.269.15 ಕೋಟಿ ಮೊತ್ತದ ಟಿಕೆಟ್ ವಿತರಣೆ ಹಾಗೂ ಹಳಿಯಾಳ-ದಾಂಡೇಲಿ ವಿಭಾಗದಲ್ಲಿ 2.40 ಕೋಟಿ ಫಲಾನುಭವಿಗಳಿಗೆ ರೂ.74.70 ಕೋಟಿ ಮೊತ್ತದ ಉಚಿತ ಟಿಕೆಟ್ ವಿತರಣೆ ಮಾಡಲಾಗಿದೆ.
ಶಕ್ತಿ ಯೋಜನೆಯ ಮೂಲಕ ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿರುವುದು ಮಾತ್ರವಲ್ಲದೇ ಹೆಚ್ಚಿನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿನಿಯರಿಗೆ ತಮ್ಮ ಭವಿಷ್ಯದ ಕನಸುಗಳನ್ನು ನನಸು ಮಾಡಿಕೊಳ್ಳುವ ಸುವರ್ಣಾವಕಾಶವಾಗಿದೆ. ಅಲ್ಲದೇ ಮಹಿಳೆಯರು ಉದ್ಯೋಗ, ಪ್ರವಾಸ ಮತ್ತಿತರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುಕೂಲವಾಗಿರುವುದರ ಜೊತೆಗೆ ಈ ಪ್ರಯಾಣ ವೆಚ್ಚದ ಉಳಿತಾಯದ ಮೊತ್ತವು ದೈನಂದಿನ ಬದುಕಿನಲ್ಲಿನ ಹಲವು ಅವಶ್ಯಕತೆಗಳನ್ನು ಪೂರೈಸಲು ನೆರವಾಗಿದೆ.
ಉಚಿತ ಪ್ರಯಾಣದ ಮೊದಲು ಸಾರಿಗೆಗಾಗಿ ಮಾಡುತ್ತಿದ್ದ ವೆಚ್ಚದ ಮೊತ್ತವು ವಿದ್ಯಾರ್ಥಿನಿಯರಿಗೆ ಕಾಲೇಜಿನ ಶುಲ್ಕ ಭರಿಸಲು, ಪಠ್ಯ ಪುಸ್ತಕ ಖರೀದಿಸಲು ನೆರವಾಗಿದ್ದರೆ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತು ಖಾಸಗಿ ಉದ್ಯೋಗದಲ್ಲಿರುವ ಮಹಿಳೆಯರು ತಮ್ಮ ಕುಟುಂಬಗಳನ್ನು ಮತ್ತು ಪೋಷಕರು ತಮ್ಮ ಮಕ್ಕಳನ್ನು ನಿರಂತರವಾಗಿ ಭೇಟಿ ಮಾಡಿ ನೆಮ್ಮದಿಯ ಜೀವನ ಸಾಗಿಸಲು ನೆರವಾಗಿದೆ.
ನನಗೆ ಆರೋಗ್ಯ ಸರಿ ಇರುವುದಿಲ್ಲ.
ನಾನೂ ಬಾಳೆಸರದಿಂದ ಚಿಕಿತ್ಸೆಗಾಗಿ ಶಿರಸಿಗೆ ಪದೇ ಪದೇ ಬರುತ್ತಿರುತ್ತೇನೆ. ಪ್ರಯಾಣದ ವೆಚ್ಚ ಉಚಿತವಿರುವುದರಿಂದ ನನಗೆ ಆರೋಗ್ಯ ಸಮಸ್ಯೆಯನ್ನು ನಿವಾರಿಸಲು ತುಂಬಾ ಅನುಕೂಲವಾಗಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣದಿಂದಾಗಿ ನನಗೆ ಸಾಕಷ್ಟ್ಟು ಅನುಕೂಲವಾಗಿದೆ. ನನ್ನ ಪ್ರಯಾಣದ ವೆಚ್ಚ ಉಳಿತಾಯವಾಗಿದೆ. ಅದೇ ಹಣವನ್ನು ನನ್ನ ಔಷಧಗಳನ್ನು ತೆಗೆದುಕೊಳ್ಳಲು ಬಳಸಿಕೊಳ್ಳುತ್ತಿದ್ದೇನೆ. ಅಲ್ಲದೇ ನಮ್ಮ ಮನೆಯ ಅಗತ್ಯ ವಸ್ತುಗಳನ್ನು ತೆಗೆದುಕೊಂಡ ಹೋಗಲು ನನಗೆ ಸಾರಿಗೆ ವ್ಯವಸ್ಥೆ ಸಹಕಾರ ನೀಡಿದೆ ಎನ್ನುತ್ತಾರೆ ಶಿರಸಿ ತಾಲೂಕಿನ ಬಾಳೇಸರ ಗ್ರಾಮದ ಶಕ್ತಿ ಯೋಜನೆಯ ಫಲಾನುಭವಿ ನವಾಬಿ ಅಖ್ತರ ಶೇಖ
ಶಕ್ತಿ ಯೋಜನೆಯಿಂದಾಗಿ ಸಾರಿಗೆ ನಿಗಮದ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಈ ಹಿಂದೆ ಓಡಾಟ ನಡೆಸುತ್ತಿದ್ದ ಮಾರ್ಗದ ಬಸ್ಗಳಲ್ಲಿ ಮೊದಲಿಗಿಂತ ಹೆಚ್ಚಿನ ಆದಾಯ ಬರುತ್ತಿದ್ದು, ಸಂಸ್ಥೆಯ ನಷ್ಠದ ಪ್ರಮಾಣ ಕಡಿಮೆಯಾಗಿದೆ. ಇದು ನಿಗಮಕ್ಕೆ ಲಾಭದಾಯಕವಾಗಿದೆ. ಅಲ್ಲದೇ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗೆ 84 ಹೊಸ ಬಸ್ಗಳು ಮಂಜೂರಾಗಿದ್ದು, ಖಾಲಿಯಿದ್ದ ಡ್ರೆöÊವರ್ ಮತ್ತು ಕಂಡಕ್ಟರ್ಗಳ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 300 ಹೊಸ ಬಸ್ಗಳಿಗೆ ಟೆಂಡರ್ ಆಗಿದ್ದು, ಅದರಲ್ಲಿಯೂ ಜಿಲ್ಲೆಗೆ ಹೊಸ ಬಸ್ಗಳು ಬರಲಿವೆ. ಶಕ್ತಿ ಯೋಜನೆಯಿಂದಾಗಿ ನಮ್ಮ ಸಂಸ್ಥೆಯ ಮೂಲಕ ಮಹಿಳಾ ಪ್ರಯಾಣಿಕರಿಗೆ, ಜಿಲ್ಲೆಯ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ. : ಬಸವರಾಜ್ ಅಮ್ಮನವರ್, ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಶಿರಸಿ.